ಗಾಂಧಿಯ ಮೇಲೆ ದ್ವೇಷವಾದಿಗಳ ಬ್ರಹ್ಮಚರ್ಯಾಸ್ತ್ರ ಪ್ರಯೋಗ
ಗಾಂಧಿಯ ಮೇಲೆ ದ್ವೇಷವಾದಿಗಳ ಬ್ರಹ್ಮಚರ್ಯಾಸ್ತ್ರ ಪ್ರಯೋಗ
.......................................
* ಅರವಿಂದ ಚೊಕ್ಕಾಡಿ
ಯಾವನೇ ಒಬ್ಬ ನಿಜವಾದ ನಾಯಕ ಆ ಸಂದರ್ಭಕ್ಕೆ ಅಗತ್ಯವಾದ ನಿರ್ಧಾರಗಳನ್ನೆ ತೆಗೆದುಕೊಳ್ಳುತ್ತಾನೆ. ಎಷ್ಟೊ ಕಾಲದ ನಂತರ ಆ ನಿರ್ಧಾರ ಸರಿಯಾಗಿಲ್ಲ ಎನಿಸಬಹುದು. ಆದರೆ ಆ ಸಂದರ್ಭದಲ್ಲಿ ಸರಿಯೇ ಆಗಿರುತ್ತದೆ. ಮಹಾತ್ಮಾ ಗಾಂಧಿಯವರು ತೆಗೆದುಕೊಂಡ ಅನೇಕ ನಿರ್ಧಾರಗಳನ್ನೆಲ್ಲ ಆ ಕಾಲಮಾನದ ಸಂದರ್ಭದ ಅಗತ್ಯವನ್ನು ಪರಿಗಣಿಸದೆ "ತಪ್ಪು ನಿರ್ಧಾರಗಳು" ಎಂದು ತಮ್ಮದೇ ಗುಂಪಿನಲ್ಲಿ ಪ್ರಚಾರ ಮಾಡುವ ದುಷ್ಟ ಶಕ್ತಿಗಳು ಬಹು ಹಿಂದಿನಿಂದಲೂ ಇದ್ದವು. ಈ ಶಕ್ತಿಗಳು ತಮ್ಮದೇ ಗುಂಪಿನಲ್ಲಿ ಏನು ಬೇಕಾದರೂ ಹೇಳಬಹುದು. ಆದರೆ ಸಾರ್ವಜನಿಕವಾಗಿ ಮುಕ್ತ ಚರ್ಚೆಯಲ್ಲಿ ಹಾಗೆ ಹೇಳಲು ಹೊರಟಾಗ ಒಂದು ವಿಷಯಕ್ಕೆ ಇರುವ ಬಹು ಆಯಾಮಗಳು ಚರ್ಚೆಗೆ ಬರುತ್ತವೆ. ಗಾಂಧೀಜಿಯ ನಿರ್ಧಾರಗಳ ಚಾರಿತ್ರಿಕ ಔಚಿತ್ಯಗಳು ವಿವರಿಸಲ್ಪಡುತ್ತಾ ಹೋದ ಹಾಗೆ ದುಷ್ಟ ಶಕ್ತಿಗಳಿಗೆ ಗಾಂಧೀಜಿಯನ್ನು ಕೆಟ್ಟವನಾಗಿ ತೋರಿಸಲು ಯಾವ ಅಸ್ತ್ರವೂ ಉಳಿದಿಲ್ಲದ ಪರಿಸ್ಥಿತಿ ಬಂದಿದೆ. ಆಗ ತೆಗೆದಿರುವುದೇ ಬ್ರಹ್ಮಚರ್ಯಾಸ್ತ್ರ.
ಬ್ರಹ್ಮಚರ್ಯದ ಪ್ರಯೋಗವನ್ನು ಸಾಕಷ್ಟು ಸಂತರು ಮಾಡಿದ್ದರು. ಆದರೆ ಅದನ್ನು ಹೇಳಿಲ್ಲ. ಗಾಂಧಿಯವರು ಯಾವುದನ್ನೂ ಮುಚ್ಚಿಟ್ಟವರಲ್ಲ. ಆದ್ದರಿಂದ ತನ್ನ ಪ್ರಯೋಗದ ಬಗ್ಗೆ ತಾನೇ ಹೇಳಿದರು. ಲೌಕಿಕ ವ್ಯಾಪ್ತಿಯಲ್ಲಿ ಈ ಬ್ರಹ್ಮಚರ್ಯದ ಪ್ರಯೋಗದ ಕುರಿತಾಗಿ ಒಂದು ದೃಷ್ಟಿಕೋನವನ್ನು ತಾಳುವುದು ಕಷ್ಟಕರ. ಏಕೆಂದರೆ ಬ್ರಹ್ಮಚರ್ಯದ ಪ್ರಯೋಗವು ಅಧ್ಯಾತ್ಮ ಸಾಧನೆಯ ಒಂದು ಭಾಗವಾಗಿ ಬರುತ್ತದೆ. ಅಧ್ಯಾತ್ಮವು ಸಾರ್ವತ್ರಿಕ ಅನುಭವವಲ್ಲ. ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಆಗಬಹುದಾದ ಅನುಭವ. ಆದ್ದರಿಂದ ಅದನ್ನು ಸಾರ್ವತ್ರೀಕರಣಗೊಳಿಸಿ ಅರ್ಥೈಸುವುದು ಕಷ್ಟವಾಗುತ್ತದೆ.
ಗಾಂಧೀಜಿಯವರ ವಿಚಾರಕ್ಕೆ ಬರುವುದಾದರೆ ಅವರು ಒಬ್ಬ ಅಧ್ಯಾತ್ಮದ ಸಾಧಕರೂ ಆಗಿದ್ದರು. ತಮ್ಮ ಆತ್ಮಕಥೆಯಲ್ಲಿ ಅವರು,"ಸತ್ಯಾನ್ವೇಷಣೆಯೇ ನನ್ನ ಜೀವನದ ಗುರಿ" ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಬರುವ 'ಸತ್ಯ' ಪರಿಕಲ್ಪನೆಯು ಲೌಕಿಕ ವ್ಯಾಪ್ತಿಯ,'ನಿಜ' ಎನ್ನುವ ಅರ್ಥದ್ದಲ್ಲ.'ಸತ್' ಎನ್ನುವುದೇ 'ಸತ್ಯ'. ಆಕಾರಾತೀತ,ಗುಣಾತೀತ,ಲಿಂಗಾತೀತವಾದ ಶಕ್ತಿಯನ್ನು ಉಪನಿಷತ್ತುಗಳಲ್ಲಿ,' ಸತ್, ಬ್ರಹ್ಮನ್, ಪುರುಷ, ಈಶ' ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಈ 'ಸತ್' ನ ಸಾಧನೆಯಲ್ಲಿ ಬ್ರಹ್ಮಚರ್ಯವೂ ಒಂದು ವಿದಾನವಾಗಿದೆ. ಮುಂಡಕ ಉಪನಿಷತ್," ಸತ್ಯೇನ ಲಭ್ಯಸ್ತಪಸಾಹ್ಯೇಷ ಆತ್ಮಾ ಸಮ್ಯಜ್ಞಾನೇನ ಬ್ರಹ್ಮಚರ್ಯೇಣ ನಿತ್ಯಮ್"(3.1.5)ಎಂದು 'ಸತ್' ಗೂ 'ಬ್ರಹ್ಮಚರ್ಯ' ಕ್ಕೂ ಸಂಬಂಧವನ್ನು ಕಲ್ಪಿಸುತ್ತದೆ. ಪತಂಜಲಿಯ ಯೋಗ ಸೂತ್ರದ ಪ್ರಕಾರ ಯೋಗದ 5 'ಯಮ' ಗಳಲ್ಲಿ ಬ್ರಹ್ಮಚರ್ಯವೂ ಒಂದು. ಬ್ರಹ್ಮಚರ್ಯದ ನಿಯಮಗಳ ಪ್ರಕಾರ ಲೈಂಗಿಕತೆಯನ್ನು ತ್ಯಜಿಸಬೇಕು. ಅಹಿಂಸೆ, ಸರಳ ಜೀವನ, ಶುದ್ಧ ಆಹಾರ, ದ್ಯಾನಗಳನ್ನು ಆಚರಿಸಬೇಕು. ಎಲ್ಲ ಬಗೆಯ ಶಕ್ತಿಯನ್ನು ಸಂರಕ್ಷಿಸುವ ಮೂಲಕ ಅಧ್ಯಾತ್ಮದ ಅಭಿವೃದ್ಧಿಯನ್ನು ಉತ್ತೇಜಿಸುವುದು ಬ್ರಹ್ಮಚರ್ಯದ ಉದ್ದೇಶವಾಗಿದೆ. ಬ್ರಹ್ಮಚರ್ಯದಲ್ಲಿ ದೇಹ, ಮನಸ್ಸು ಮತ್ತು ಮಾತನ್ನು ಒಗ್ಗೂಡಿಸಬೇಕು. ಅಂದರೆ ಲೈಂಗಿಕ ಸಂಬಂಧದ ತ್ಯಾಗವೊಂದೇ ಬ್ರಹ್ಮಚರ್ಯದ ಲಕ್ಷಣವಲ್ಲ. ವೀಕ್ಷಣೆ, ಶ್ರವಣ, ಸ್ಪರ್ಶ ಮೂರರಿಂದ ದೊರೆಯುವ ಸುಖವನ್ನೂ ಮೀರಿ ನಿಲ್ಲಬೇಕು. ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ 'ಬ್ರಹ್ಮಚರ್ಯ' ಕ್ಕೆ ಭಿನ್ನ ದೃಷ್ಟಿಕೋನಗಳೂ ಇವೆ. ಶಾಂಡಿಲ್ಯ ಉಪನಿಷತ್ತಿನ ಒಂದನೆ ಅಧ್ಯಾಯವು ಲೈಂಗಿಕ ಸಂಬಂಧವನ್ನೆ ನಿರಾಕರಿಸುತ್ತದೆ. ಆದರೆ ಲಿಮಗ ಪುರಾಣದ ಅಧ್ಯಾಯ 1.8 ಪತ್ನಿಯ ಹೊರತು ಬೇರೆ ಯಾರೊಂದಿಗೂ ಲೈಂಗಿಕ ಸಂಬಂಧವನ್ನು ಹೊಂದದೆ ಇರುವುದು ಬ್ರಹ್ಮಚರ್ಯ ಎಂದು ಹೇಳುತ್ತದೆ.
ಬ್ರಹ್ಮಚರ್ಯದ ಪರಿಕಲ್ಪನೆಯನ್ನು ಲೌಕಿಕ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳಬೇಕಾದರೆ ಕ್ರಿಯೆಯಲ್ಲಿದ್ದೂ ಕ್ರಿಯೆಯಿಂದ ಮಾನಸಿಕವಾಗಿ ದೂರ ಇರುವ ಸ್ಥಿತಿಯ ಬಗ್ಗೆ ಹಿಂದೂ ಧಾರ್ಮಿಕ ರಚನೆಗಳಲ್ಲಿ ಕಾಣಿಸುವ ಸಂಗತಿಗಳನ್ನು ತಿಳಿದುಕೊಳ್ಳಬೇಕು. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ,"ಲಿಪ್ಯತೇನಸ ಪಾಪೇನ ಪದ್ಮಪತ್ರ ಮಿವಾಂಭಸಾ";ಅಂದರೆ ಪಾಪದಿಂದ ಮುಕ್ತನಾಗಲಿಕ್ಕಾಗಿ ತಾವರೆ ಎಲೆಯ ಮೇಲೆ ನೀರಿನ ಹನಿ ಇರುವಂತೆ ಇರು ಎನ್ನುತ್ತಾನೆ. ಶ್ರೀಮದ್ಭಾಗವತದಲ್ಲಿ ಬಬ್ರುವಾಹನನು ಕೊಂದ ಅರ್ಜುನನ ತಲೆ ಕಾಣೆಯಾದಾಗ ಕೃಷ್ಣ,"ಅನಾದಿ ಬ್ರಹ್ಮಚರ್ಯವನ್ನು ನಾನು ಪಾಲಿಸಿದ್ದೇ ಆಗಿದ್ದಲ್ಲಿ ಅರ್ಜುನನ ತಲೆ ಎಲ್ಲಿದ್ದರೂ ಬರಲಿ" ಎನ್ನುವ ಮಾತು ಬರುತ್ತದೆ. ಮಹಾಸತಿ ಅನುಸೂಯಾಳ ಕಥೆಯಲ್ಲಿ ತ್ರಿಮೂರ್ತಿಗಳು ಅನುಸೂಯಾ ನಗ್ನಳಾಗಿ ತಮಗೆ ಊಟ ಬಡಿಸಬೇಕೆಂದು ಕೇಳಿದಾಗ ತ್ರಿಮೂರ್ತಿಗಳೇ ಶಿಶುಗಳಾದರು ಎಂಬ ರೂಪಕ ಬರುತ್ತದೆ. ಅಂದರೆ ಶಿಶುವಿನ ಮನಸ್ಥಿತಿ ಇದ್ದಾಗ ನಗ್ನತೆಗೆ ಅಶ್ಲೀಲತೆಯ ಸೋಂಕು ತಗಲುವುದಿಲ್ಲ. ಮತ್ತು ಇದನ್ನು ಅನುಸೂಯಾಳ ಪತಿ ಅತ್ರಿ ಮುನಿ ಆಕ್ಷೇಪಿಸಿಯೂ ಇಲ್ಲ. ಇವೆಲ್ಲ ಕಥೆಗಳೇ. ಆದರೆ ಕಥೆಯ ಹಿಂದೆ ಕ್ರಿಯೆಯಲ್ಲಿದ್ದೂ ಕ್ರಿಯೆಯನ್ನು ಅನುಭವಿಸದೆ ನಿರ್ಲಿಪ್ತನಾಗಿರುವ ಮನಸ್ಥಿತಿಯ ಪರಿಕಲ್ಪನೆ ಇದೆ. ಗಾಂಧೀಜಿಯ ಬ್ರಹ್ಮಚರ್ಯ ಪ್ರಯೋಗದಲ್ಲಿ ಪಾಲ್ಗೊಂಡ ಮಹಿಳೆ ಕೂಡ ತಾನು ಗಾಂಧಿಯನ್ನು ತಾಯಿಯಂತೆ ಸ್ವೀಕರಿಸುತ್ತೇನೆ ಎಂದಿದ್ದರು. ಇದೊಂದು ಮಾನಸಿಕ ಸ್ಥಿತಿ. ಸಾರ್ವತ್ರೀಕರಣ ಸಾಧ್ಯವಾಗಲಾರದು.
ಗಾಂಧೀಜಿ ತಮ್ಮ ಬ್ರಹ್ಮಚರ್ಯ ಪ್ರಯೋಗದಲ್ಲಿನ ಲೈಂಗಿಕತೆಗೆ ಸಂಬಂಧಿಸಿದ ವಿಷಯವನ್ನು ಕಲ್ಕತ್ತಾ ಮತ್ತು ನೌಖಾಲಿಯಲ್ಲಿ ನಡೆದ ಮತೀಯ ಗಲಭೆಯ ಸಂದರ್ಭದಲ್ಲಿ ರಾಜಕುಮಾರಿ ಅಮೃತ್ ಕೌರ್ ಅವರಿಗೆ ಬರೆದ ಪತ್ರದಲ್ಲಿ,"ಬ್ರಹ್ಮಚರ್ಯದ ಮುಂದೆ ಹಿಂಸೆ ನಿಲ್ಲುವುದಿಲ್ಲ. ಆದರೆ ನನ್ನ ಎದುರಿಗೇ ಹಿಂಸೆ ನಡೆಯುತ್ತಿದೆ" ಎಂದು ಹೇಳುತ್ತಾ ವಿವಸ್ತ್ರನಾಗಿ ವಿವಸ್ತ್ರ ಮಹಿಳೆಯೊಂದಿಗಿದ್ದು ತನ್ನನ್ನು ತಾನು ಪರೀಕ್ಷಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದರ ಕುರಿತಾಗಿ ಅನೇಕ ಆಯಾಮದ ಚರ್ಚೆಗಳು ಗಾಂಧಿ ಬದುಕಿದ್ದಾಗಲೇ ನಡೆದಿತ್ತು. ಅವರ ನಿಕಟವರ್ತಿಗಳೇ ಆಕ್ಷೇಪಿಸಿದ್ದರು. ಮಹಿಳಾವಾದಿ ನೆಲೆಯಲ್ಲಿಯೂ ಒಂದಷ್ಟು ಪ್ರಶ್ನೆಗಳು ಬಂದಿದ್ದು ಪ್ರಯೋಗದಲ್ಲಿ ತೊಡಗಿಕೊಂಡ ಮಹಿಳೆಗೆ ಆಗುವ ಮಾನಸಿಕ ಹಿಂಸೆಯ ಬಗ್ಗೆ ಗಾಂಧಿಯವರನ್ನು ಖಂಡಿಸಿದವರೂ ಇದ್ದರು. ಗಾಂಧಿಯವರೂ ಮಹಿಳೆಗೆ ಆಗುವ ಮಾನಸಿಕ ಹಿಂಸೆಯ ವಿಷಯವನ್ನು ಒಪ್ಪಿಕೊಂಡಿದ್ದರು. ವೈಯಕ್ತಿಕವಾಗಿ ನಾನೂ ಕೂಡ ಬ್ರಹ್ಮಚರ್ಯದ ಪ್ರಯೋಗವನ್ನು ಒಪ್ಪುವುದಿಲ್ಲ. ಏಕೆಂದರೆ ಅದನ್ನು ಸ್ಚೀಕರಿಸುವಷ್ಟು ಮಾನಸಿಕ ಪಕ್ವತೆ ನನಗಿಲ್ಲ.
ಆದರೆ, ಇಲ್ಲಿ ಇರುವ ಪ್ರಶ್ನೆ ಗಾಂಧೀಜಿಯ ಬ್ರಹ್ಮಚರ್ಯದ ಪ್ರಯೋಗದ ಕುರಿತ ವೈಚಾರಿಕ ಚರ್ಚೆಗೆ ಸಂಬಂಧಿಸಿದ್ದಲ್ಲ. ವೈಚಾರಿಕ ಚರ್ಚೆಯೇ ಉದ್ದೇಶ ಆಗಿರುವವರು ಬ್ರಹ್ಮಚರ್ಯದ ವಿಷಯದಲ್ಲಿ ಲೈಂಗಿಕ ಸಂಯಮದ ಪ್ರಯೋಗವನ್ನು ಮಾತ್ರವೇ ಪ್ರಸ್ತಾಪಿಸಲು ಸಾಧ್ಯವಿಲ್ಲ. ಅಹಿಂಸೆಯ ಪಾಲನೆ, ಸರಳ ಜೀವನ, ಶುದ್ಧ ಆಹಾರ ಮುಂತಾಗಿ ಬ್ರಹ್ಮಚರ್ಯದ ಮಾನದಂಡಗಳಾದ ಎಲ್ಲ ವಿಷಯಗಳನ್ನೂ ಗಾಂಧೀಜಿ ಹೇಗೆ ನಿರ್ವಹಿಸಿದರು ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಆ ಬಗ್ಗೆ ಒಂದೇ ಒಂದು ಮಾತೂ ಇಲ್ಲದೆ ಲೈಂಗಿಕತೆಗೆ ಸಂಬಂಧಿಸಿದ ಭಾಗವನ್ನು ಮಾತ್ರ ಪರಿಗಣಿಸಿದಾಗ ಚರ್ಚೆಗಿರುವುದು ವೈಚಾರಿಕ ಉದ್ದೇಶ ಅಲ್ಲ ಎಂದು ಭಾವಿಸಬೇಕಾಗುತ್ತದೆ. ಅಲ್ಲದೆ ಗಾಂಧಿಯವರ ಮೇಲೆ ಈ ಬ್ರಹ್ಮಚರ್ಯಾಸ್ತ್ರವನ್ನು ಪ್ರಯೋಗಿಸುತ್ತಿರುವವರು ಎಲ್ಲ ವಿಷಯಗಳಲ್ಲೂ ಗಾಂಧಿಯವರನ್ನು ದ್ವೇಷಿಸುವವರು ಮತ್ತು ಗಾಂಧಿ ಜಯಂತಿಯನ್ನು ಕೂಡ ಗಾಂಧಿ ನಿಂದನೆಯ ಮೂಲಕವೇ ಆಚರಿಸುವವರು. ಅಂದ ಮೇಲೆ ಅವರ ಚರ್ಚೆಯಲ್ಲಿ ವೈಚಾರಿಕ ಉದ್ದೇಶವನ್ನು ಕಾಣಲು ಸಾಧ್ಯವಿಲ್ಲ. ಬದಲಿಗೆ ಲೈಂಗಿಕತೆಯ ವಿಷಯ ರೋಚಕವಾಗಿರುತ್ತದೆ, ಸುಲಭವಾಗಿ ಅನೈತಿಕತೆಯ ಅನುಮಾನವನ್ನು ಹುಟ್ಟು ಹಾಕಲು ಸಾಧ್ಯವಾಗುತ್ತದೆ ಎನ್ನುವ ಲೆಕ್ಕಾಚಾರಗಳೇ ಇಲ್ಲಿ ಕಾಣಿಸುತ್ತಿವೆ.
ಗಾಂಧಿಯವರ ಮೇಲೆ ಬ್ರಹ್ಮಚರ್ಯಾಸ್ತ್ರವನ್ನು ಪ್ರಯೋಗಿಸುತ್ತಿರುವವರು ತರ್ಕ ನಿಷ್ಠರು,ಆದರೆ ಸತ್ಯ ನಿಷ್ಠರಲ್ಲ. ಸತ್ಯವನ್ನು ಅರ್ಥ ಮಾಡಿಸಲು ತರ್ಕ ಬೇಕು. ಆದರೆ ಸತ್ಯವನ್ನು ನಿರಾಕರಿಸಲು ತರ್ಕವನ್ನು ಬಳಸುವುದು ಈ ತಂಡದ ಜಾಯಮಾನ. ಉದಾಹರಣೆಗೆ ಎಡಪಂಥೀಯರು ಏನೇ ಮಾಡಿದರೂ ಟೂಲ್ ಕಿಟ್, ಹಿಂದೂ ಧರ್ಮಕ್ಕೆ ಅಪಾಯ ಎನ್ನುವುದು ಇವರ ಪ್ರತಿಪಾದನೆ. ಆದರೆ ಎಡಪಂಥೀಯರೇ ಆದ ಭಗತ್ ಸಿಂಗ್ ಬಗ್ಗೆ ಬಹಳ ಪ್ರೀತಿ. ಭಗತ್ ಸಿಂಗ್ ಅವರು ಬದುಕಿದ್ದರೆ ಆಗ ಅವರನ್ನೂ ಇವರು ಹಿಂದೂ ವಿರೋಧಿ ಎಂದೇ ಕರೆಯುತ್ತಿದ್ದರು. ಆದರೆ ಗಾಂಧಿಯವರನ್ನು ಕೆಟ್ಟವರನ್ನಾಗಿ ಕಾಣಿಸಲು ಭಗತ್ ಸಿಂಗ್ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಆದರೆ ಭಗತ್ ಸಿಂಗ್ ಮತ್ತವರ ಗೆಳೆಯರಿಗೆ ಮರಣ ದಂಡನೆ ನೀಡಬಾರದೆಂದು ಗಾಂಧಿ ಪತ್ರ ಬರೆದ ವಿಷಯವನ್ನು ಮಾತ್ರ ಅಡಗಿಸಿಡುತ್ತಾರೆ. ಗಾಂಧಿ ಹೇಳಿದ ಕೂಡಲೇ ಬ್ರಿಟಿಷರು ಭಗತ್ ಸಿಂಗ್ ಅವರನ್ನು ಬಿಟ್ಟು ಬಿಡುತ್ತಿದ್ದರು ಎಂದಾದರೆ, "ನೀವಿನ್ನು ಹೋಗಿ" ಎಂದು ಗಾಂಧಿ ಹೇಳಿದ್ದರೆ ಸಾಕಾಗಿತ್ತಲ್ಲವೇ, ಸ್ವಾತಂತ್ರ್ಯ ಕೊಟ್ಟು ಹೋಗಬೇಕಿತ್ತಲ್ಲ, ಗಾಂಧಿ ಸ್ವಾತಂತ್ರ್ಯ ಹೋರಾಟ ಮಾಡಬೇಕಾದ ಅಗತ್ಯ ಏನಿತ್ತು? ತಾನು ಬ್ರಹ್ಮಚರ್ಯದ ಪ್ರಯೋಗ ಮಾಡಿದ್ದೆ ಎಂದು ಗಾಂಧಿ ಹೇಳಿದ ಮಾತನ್ನು ನಂಬುತ್ತಾರೆ. ಆದರೆ ಸಂಯಮವನ್ನು ಕಾಪಾಡಿಕೊಂಡಿದ್ದೆ ಎನ್ನುವುದನ್ನು ಮಾತ್ರ ನಂಬುವುದಿಲ್ಲ! ಹಿಂಸಾ ವಾದವನ್ನು ಪ್ರತಿಪಾದಿಸುತ್ತಾರೆ. ಆದರೆ ಇವರು ಹೋರಾಟ ಮಾಡಬೇಕಾದರೆ ಧರಣಿ ಕೂತುಕೊಳ್ಳುತ್ತಾರೆ. ವಿರೋಧಿಯನ್ನು ಕ್ಷಾತ್ರ ತೇಜಸ್ಸಿನಿಂದ ಎದುರಿಸಬೇಕು ಎನ್ನುತ್ತಾರೆ. ಅದಕ್ಕೆ ಉದಾಹರಣೆಯಾಗಿ ಸಾವರ್ಕರ್ ಅವರನ್ನು ತಮ್ಮ ನಾಯಕನಾಗಿ ಮಾಡಿಕೊಳ್ಳುತ್ತಾರೆ. ಆದರೆ ಸ್ವತಃ ಸಾವರ್ಕರ್ ಕ್ಲೆಮೆನ್ಸಿ ಪದ್ಧತಿಯಲ್ಲಿ ಜೈಲಿನಿಂದ ಬಿಡುಗಡೆಯಾಗಲು ಬರೆದ ಪತ್ರದಲ್ಲಿ ತನ್ನನ್ನು ತಾನು 'ಪ್ರೊಡಿಗಾಲ್ ಸನ್(ಮನೆಯನ್ನು ದೋಚಿ ಹೋದ ಮಗ ಎಂದು ಅರ್ಥ) ಎಂದು ಕರೆದುಕೊಂಡು ಬ್ರಿಟಿಷ್ ಸರ್ಕಾರವನ್ನು ತನ್ನ ಪೋಷಕರ ಮನೆಯ ದ್ವಾರ ಎಂದು ಬರೆದುಕೊಳ್ಳುತ್ತಾರೆ. ತಾನು ಬ್ರಿಟಿಷ್ ಸರ್ಕಾರಕ್ಕೆ ಎಂದೆಂದೂ ಬದ್ಧನಾಗಿದ್ದು ಹಿಂಸೆಯನ್ನು ಸಂಪೂರ್ಣವಾಗಿ ತ್ಯಜಿಸುತ್ತೇನೆ ಎಂದು ಬರೆದು ಕೊಡುತ್ತಾರೆ. ಹಿಂಸೆಯನ್ನು ಸಂಪೂರ್ಣ ತ್ಯಜಿಸುವುದು ಗಾಂಧಿ ತತ್ವ. ಕ್ಷಾತ್ರ ತೇಜಸ್ಸಿನಿಂದ ಹೋರಾಟ ಮಾಡಿ ಕಡೆಗೆ ಬಂದು ಸೇರುವುದು ಗಾಂಧಿ ತತ್ವಕ್ಕೇ ಎಂದಾದರೆ ಆ ಕ್ಷಾತ್ರ ತೇಜಸ್ಸೇ ಪ್ರಶ್ನಾರ್ಹ ಅಲ್ಲವೆ. ಸಾವರ್ಕರ್ ಅವರು ಹೊರಬಂದು ದೇಶ ಸೇವೆ ಮಾಡಲು ಹೂಡಿದ ತಂತ್ರಗಾರಿಕೆ ಇದು ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಹೊರಗೆ ಬಂದ ಮೇಲೆ ಅವರೆಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದ್ದರು ಎಂದು ಹೇಳುವುದಿಲ್ಲ. ಸಾವರ್ಕರ್ ಮಾಡಿದ್ದು ತಂತ್ರಗಾರಿಕೆ. ಗಾಂಧಿ- ನೆಹರೂ ಮಾಡಿದ ಎಲ್ಲವೂ ದುರುದ್ದೇಶಪೂರಿತ! ಅಂದರೆ ಈ ದೇಶದಲ್ಲಿ ತಮ್ಮ ಕಡೆಯವರು ಮಾಡಿದ್ದು ಮಾತ್ರ ತಂತ್ರಗಾರಿಕೆ,ಉಳಿದವರೆಲ್ಲ ದುರುದ್ದೇಶಪೂರಿತರು ಎನ್ನುವುದು ನಿಲುವು.
1876 ರಲ್ಲಿ ಹಿಂದೂ ಮುಸ್ಲಿಮರು ಒಂದೇ ರಾಷ್ಟ್ರವಾಗಲಾರರು ಎಂದು ಸಯ್ಯದ್ ಅಹಮದ್ ಖಾನ್ ಹೇಳಿದರು. 1937 ರ ಹಿಂದೂ ಮಹಾ ಸಭಾದ 19 ನೆಯ ಅಧಿವೇಷನದಲ್ಲಿ ಸಾವರ್ಕರ್ ದೇಶ ವಿಭಜನೆಯ ಪ್ರಸ್ತಾವನೆ ಮಾಡಿದರು. 1940 ರ ಮುಸ್ಲಿಂ ಲೀಗ್ ಅಧಿವೇಶನದಲ್ಲಿ ಜಿನ್ನಾ ಪಾಕಿಸ್ಥಾನ ನಿರ್ಣಯವನ್ನು ಮಂಡಿಸಿ ಅಧಿವೇಶನವು ಅಂಗೀಕರಿಸಿತು. 1947 ರಲ್ಲಿ ಕ್ಲೈಮೆಂಟ್ ಅಟ್ಲಿ ಸರ್ಕಾರ ದೇಶ ವಿಭಜನೆಯನ್ನು ಮಾಡಿತು. ಆದರೆ ದೇಶ ವಿಭಜನೆಗೆ ಗಾಂಧಿ ಕಾರಣ ಎಂದು ಗಾಂಧಿ ದ್ವೇಷಿಗಳ ತರ್ಕ! ವಿಭಜನೆ ಆ ಕಾಲದ ಅನಿವಾರ್ಯತೆಯಾಗಿತ್ತು. ಗೋಳ್ವಲ್ಕರ್ ಕೂಡ ದೇಶ ವಿಭಜನೆಯ ವಿರೋಧದ ಹೋರಾಟವನ್ನು ಮಾಡಲು ಕರೆ ಕೊಟ್ಟಿರಲಿಲ್ಲ ಎಂದ ಮೇಲೆ,"ಗೆಳೆಯ ಜಿನ್ನಾ ಮಾತನ್ನು ನಾನು ಒಪ್ಪುತ್ತೇನೆ" ಎಂದು ದೇಶ ವಿಭಜನೆಯ ಬಗ್ಗೆ ಸಾವರ್ಕರ್ ಹೇಳಿದ್ದ ಮೇಲಾದರೂ ಅದು ಆ ಕಾಲದ ಅನಿವಾರ್ಯ ನಿರ್ಧಾರವಾಗಿತ್ತು ಎಂದು ಅರ್ಥ ಆಗಬೇಡವೆ.
ವಾಸ್ತವದಲ್ಲಿ ಇದೆಲ್ಲ ಅರ್ಥ ಆಗಿಲ್ಲ ಎಂದೇನೂ ಅಲ್ಲ. ಹೇಗಾದರೂ ಮಾಡಿ ಗಾಂಧಿಯವರನ್ನು ಕೆಟ್ಟವರೆಂದು ಜನಮಾನಸದಲ್ಲಿ ಬಿತ್ತಬೇಕು ಮತ್ತು ಅದರ ಬೆಳೆಯನ್ನು ತಾವು ಕುಯ್ಯಬೇಕು ಎನ್ನುವುದಷ್ಟೇ ಉದ್ದೇಶ ಎಂದು ಮೇಲ್ನೋಟಕ್ಕೇನೆ ಅರ್ಥ ಆಗುತ್ತದೆ. ಆದರೆ ಪಂಡಿತ್ ನೆಹರೂ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದಷ್ಟು ಸುಲಭದಲ್ಲಿ ಗಾಂಧಿಯವರನ್ನು ಬಿಂಬಿಸಲು ಆಗುವುದಿಲ್ಲ. ಗಾಂಧಿ ಹಿಂದೂ ಧರ್ಮಕ್ಕೆ ನಿಷ್ಠರಾಗಿದ್ದವರು. ಗಾಂಧಿ- ನಾರಾಯಣ ಗುರು ಸಂವಾದವು ಗಾಂಧಿಯವರಿಗೆ ಹಿಂದೂ ಧರ್ಮದ ಬಗ್ಗೆ ಅವರಿಗಿದ್ದ ಆಳವಾದ ನಂಬಿಕೆಗಳನ್ನು ತೆರೆದಿಡುತ್ತದೆ. ಆದರೆ ಎಲ್ಲರನ್ನೂ ಒಳಗೊಳ್ಳುವ ಗಾಂಧಿಯವರ ರಾಷ್ಟ್ರೀಯತೆಯ ಪರಿಕಲ್ಪನೆ ಇವರಿಗೆ ಆಗಿಬರುವುದಿಲ್ಲ. ಆದ್ದರಿಂದ ಗಾಂಧಿಯವರನ್ನು ಹೇಗಾದರೂ ಮಾಡಿ ಹಣಿಯಲೇ ಬೇಕೆಂಬ ನಿರ್ಧಾರದಿಂದ ಯಾರಾದರೊಬ್ಬ ಗಾಂಧಿಯವರನ್ನು ಅವರ ಪಾಡಿಗೆ,'ಮಹಾತ್ಮ' ಎಂದು ಕರೆದರೆ ಅದಕ್ಕೂ ಭಾಷಾ ಗೂಂಡಾಗಿರಿಯ ಈ ಒಂದು ತಂಡದ ಗದರಿಸುವಿಕೆ ಇದ್ದೇ ಇರುತ್ತದೆ. ಈಗ ಇದು ಗಾಂಧಿಯವರ ಮೇಲೆ,'ಬ್ರಹ್ಮಚರ್ಯ ಪ್ರಯೋಗ' ವನ್ನು ಒಂದು ಅಸ್ತ್ರವಾಗಿ ಬಳಸಲು ಹೊರಟಿದೆ. ತನ್ನ ಎಲ್ಲ ದುರ್ನಡತೆಗಳನ್ನೂ ವಿಶ್ವದ ಮುಂದೆ ತೆರೆದಿಟ್ಟ ಗಾಂಧಿಯ ಹಾಗೆ ತನ್ನ ದುರ್ನಡತೆಗಳನ್ನು ಬಿಡಿ,ತನ್ನ ಸಣ್ಣ ತಪ್ಪನ್ನಾದರೂ ಒಪ್ಪಿಕೊಳ್ಳಬಲ್ಲ ಒಬ್ಬ ನಾಯಕನೂ ಇವರ ಬಳಿ ಇಲ್ಲ. ಎಲ್ಲವನ್ನೂ ಮುಕ್ತವಾಗಿಯೇ ಇರಿಸಿದ ಗಾಂಧಿಯವರದ್ದು ಅಲ್ಲಮರ ಜಾಡಿನಲ್ಲಿ ಸಾಗುವ ವ್ಯಕ್ತಿತ್ವ. ಅಲ್ಲಮರಿಗೆ ಸೊನ್ನಲಿಗೆ ಸಿದ್ಧರಾಮ ಎಷ್ಟು ಕಲ್ಲು ಎಸೆದರೂ ಗಾಳಿಗೆ ಎಸೆದಂತಾಗುತ್ತದೆ ಹೊರತು ತಾಗುವುದಿಲ್ಲ. ಗಾಂಧಿಯೂ ಹಾಗೆಯೇ.


