ಗದ್ಯ-ಪದ್ಯಗಳ ಸಂಕಲನ ಚೀತೆರ ಕಾಳ ಮುತ್ತ್ ಮಾಲೆ

ಇತ್ತೀಚೆಗೆ ಲೋಕಾರ್ಪಣೆ ಗೊಂಡ "ಚೀತೆರ ಕಾಳಮುತ್ತ್ ಮಾಲೆ" ಕೊಡವ ಕವನ ಪುಸ್ತಕ ಕೊಡವ ಭಾಷಾ ಸಾಹಿತ್ಯಾಭಿಮಾನಿಗಳಲ್ಲಿ ಹೊಸತೊಂದನ್ನು ನೇವರಿಸಿದ ತೃಪ್ತಿಯನ್ನು ಮೂಡಿಸಿದೆ ಎಂಬುದಾಗಿ ಬರಹಗಾರ ಅಲ್ಲಾರಂಡ ವಿಠಲ ಬರೆಯುತ್ತಾರೆ.

ಗದ್ಯ-ಪದ್ಯಗಳ ಚೀತೆರ ಕಾಳ ಮುತ್ತ್ ಮಾಲೆ

     ಅದೊಂದು ಕಾಲವಿತ್ತು . ಆ ದಿನಗಳ ಸಾಕ್ಷ್ಯ  ನುಡಿದವರು ಅಪ್ಪನೆರವಂಡ ಹರದಾಸ ಅಪ್ಪಚ್ಚು ಕವಿ "ಕೊಡಗು ಕಲೆ ಸಾಹಿತ್ಯಕ್ಕೆ ಹೇಳಿ ಮಾಡಿಸಿದ ನಾಡಲ್ಲ" ಎಂಬುದಾಗಿದೆ. ಕವಿ ಮತ್ತು ನಾಟಕಕಾರರಾದ ಇವರು  ಈ ಮಾತನ್ನು ನೋವಿನಿಂದ ನುಡಿದು ಶತಮಾನವೇ ಕಳೆದಿದೆ.  ಕಾಲ ಬದಲಾಗುತ್ತಿದೆ. ಕವಿಯ ಕಾಲದ ನಂತರದಲ್ಲಿ ಹಲವಾರು ರಂಗ ತಂಡಗಳು ಅವುಗಳ ಕರ್ತವ್ಯ ಪ್ರಯತ್ನವನ್ನು ಮಾಡಿವೆ. ಕೊಡಗಿನ ಪತ್ರಿಕೆಗಳು, ವಿಶೇಷವಾಗಿ ಕೊಡವ ಭಾಷಾ ಪತ್ರಿಕೆಗಳು ಕೊಡವ ಸಾಹಿತ್ಯ ಚಿಗುರಲು ತನ್ನದೇ ಆದ ಕ್ರಮವಹಿಸಿದೆ. ಒಂದೆರಡು ಸಂಘ ಸಂಸ್ಥೆಗಳು ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಭಗೀರಥ ಪ್ರಯತ್ನ ಮುಂದುವರೆಸಿದೆ.

      ಈ ಪ್ರಯತ್ನಗಳ ನಡುವೆ ಇತ್ತೀಚೆಗೆ ಲೋಕಾರ್ಪಣೆ ಗೊಂಡ "ಚೀತೆರ ಕಾಳಮುತ್ತ್ ಮಾಲೆ" ಕೊಡವ ಕವನ ಚಂಗೀರಣ ಎಂಬ ಪುಸ್ತಕ ಕೊಡವ ಭಾಷಾ ಸಾಹಿತ್ಯಾಭಿಮಾನಿಗಳಲ್ಲಿ ಹೊಸತೊಂದನ್ನು ನೇವರಿಸಿದ ತೃಪ್ತಿಯನ್ನು ಅವರುಗಳಲಿ ಮೂಡಿಸಲಿದೆ.    ಬಹುಶಃ ಕೊಡವ ಭಾಷೆಯಲ್ಲಿ "ಅಪ್ಪ"ನ ಬಗ್ಗೆ ಪ್ರಕಟಿತಗೊಂಡ ಎರಡನೇ ಕವನವಿದು. ಚಂಗಚಂಡ ರಶ್ಮಿ ಎಂಬ ಕವಿಯತ್ರಿ ಹಲವು ವರುಷಗಳ ಹಿಂದೆ "ಅಪ್ಪಂಡ ಅರಮನೆ" ಎಂಬ ಕವನ ಪ್ರಕಟಿಸಿದ್ದರು. ಕವನವೂ ಅದ್ಭುತವಾಗಿತ್ತು.  'ಅವ್ವ'ನ ಬಗ್ಗೆ ಕೊಡವ ಭಾಷೆಯಲ್ಲೂ ಕೆಲವಾರು ಕವನಗಳು ಬಂದಿವೆಯಾದರೂ ಅವು ಲಂಕೇಶರ 'ಅವ್ವ'ನಂತೆ ಕಾಡುವುದು ಕಷ್ಟಸಾಧ್ಯವೆ. ಸೀತಮ್ಮನವರ "ನಾಡ ಮುತ್ತ್-ಮ-ನೀಕಾಯಿತ್" ಕವನ, ತಾಯಿ ಮಗಳನ್ನು ಗಂಡನ ಮನೆಗೆ ಕಳಿಸುವಂತಹ ರೀತಿಯ ಚಡಪಡಿಕೆ ಇತ್ಯಾದಿಗಳು ಇಲ್ಲಿ ತದ್ದ್ ವಿರುದ್ಧವಾಗಿ ಕಾಣಿಸುತ್ತದೆ.

    ಎಲ್ಲೋ ಒಂದು ಕಡೆ ರಾಜಕುಮಾರಿಯ ಹಾಗೆ ಸಾಕಿದ ಮಗಳು ತೊಂದರೆಯಲ್ಲಿ ಇದ್ದಾಳೆ ಎಂದು ಭಾವಿಸಿರುವ ತಾಯಿಯನ್ನು ಮಗಳು ಸಂತೈಸುವಂತಿದೆ "ಮ" ಕವನ. "ನಿನ್ನ ಮರೆತಿಲ್ಲ, ಮರೆಯುವುದೂ ಎಲ್ಲ ಎಂಬುದಾಗಿ "ಮ"ಳ ಗುಣಗಾನ ಮಾಡಿರುವ ಪರಿ ವಿಭಿನ್ನವಾಗಿದೆ. ಭಾರತ ಚುದ್ದ ಆಡ್, ಗಟ್ಟಿ ಸಮಾಜ ಕೆಟ್ಟನ', ಪೊಮ್ಮಾಲೆ ಕೊಡಗ್, "ಒಂದಾಯ್ ಬಾಳಿ ಪೋಕನ" ಕೆಲವಾರು ಬರಹಗಳು ಊರುನಾಡು ದೇಶ ಕಟ್ಟಲು ಉಪದೇಶವೀಯುವಂತಿದೆ. ತರಾವರಿ ಮಳು, ಕಕ್ಕಡ ಮದ್ದ್ತೊಪ್ಪು, ಮನೆಪಕ್ಷಿ ಇತ್ಯಾದಿಗಳು ತಲೆಬರಹಕ್ಕೆ ಸರಿಯಾಗಿಯೇ ಮಾಹಿತಿಗಳ ನೀಡಲು ಕವಿಯತ್ರಿ ಹವಣಿಸಿದ್ದಾರೆ. ಅಳಿಸಿಹೋಗುತ್ತಿರುವ ಪ್ರಬೇಧಗಳ ಅಕ್ಷರ ರೂಪದಲ್ಲಾದರೂ ಉಳಿಸಿಕೊಳ್ಳೂವ ಪ್ರಯತ್ನ ಶ್ಲಾಘನೀಯ. ಉಕ್ಕಿನ ಹಕ್ಕಿ, ವಿಮಾನಕ್ಕೆ "ಬಯಕಣಿ ಪಕ್ಷಿ" ಎಂಬ ನಾಮಕರುಣಿಸಿ ಬರೆದಿರುವ ತೆಳು ಹಾಸ್ಯಭರಿತ ಕವನ ನಿಮ್ಮ ತುಟಿಯಂಚಿನಲ್ಲಿ ನಗುತರಿಸುತ್ತದೆ. 

"ಮನೆಪಕ್ಷಿ" (ಗುಬ್ಬಚ್ಚಿ)ಯನ್ನು ಅದರ ಕೀಟಲೆ, ಕೋಟಲೆಗಳ ವರ್ಣಿಸುತ್ತಾ ಮನೆಪಕ್ಷಿ ಮರೆಯಾಗುತ್ತಿರುವುದಕ್ಕೆ ಚೀನಾ ದೇಶವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಶಾಪದ ಶಿಕ್ಷೆ ನೀಡುತ್ತಾ ಇತರರಿಗೂ ಎಚ್ಚರಿಗೆ ನೀಡುವುದು "ಮನೆಪಕ್ಷಿ"ಯನ್ನು ಅನುಭವಿಸಿ ಓದಿದವರಿಗೆ ಅನಿಸದಿರದು. ಹಾಗೆಯೇ "ಮನೆಪಕ್ಷಿ"ಯೂ ಪ್ರಕೃತಿಯ ಕೊಡುಗೆ. ಅದರ ಅನಿವಾರ್ಯತೆ ಪ್ರಕೃತಿಗೆ ಅಗತ್ಯವೂ ಹೌದು. ಅದರ ಹಾವಳಿಯನ್ನ ಸಹಿಸಿಕೊಂಡ ಅದೆಷ್ಟೋ ಮಂದಿ ಅದಕ್ಕೆ ಹಿಡಿ ಶಾಪ ಹಾಕುತ್ತ 'ಕಾಗೆ'ಯನ್ನು ಶುಚಿತ್ವದ ಸಂಕೇತವಾಗಿ ಗುರುತಿಸಿದ್ದಾರೆ. 

"ಕಾಗೆ"ಯ ಬಗ್ಗೆ ಕಾಗಕ್ಕ-ಗುಬ್ಬಕ್ಕ ಕಥೆ ಹಾಗೆಯೆ ಕವನಗಳು ಅಕ್ಷರಗಳಲ್ಲಿ ದಾಖಲಾಗಿ ದಶಕಗಳು ಕಳೆದಿವೆ ಕೂಡ. ಮುತ್ತ್ ಮಾಲೆ ಚಂಗೀರಣದ ೫೦ ಬರಹಗಳಲ್ಲಿ ಅತಿಯಾಗಿ ಗಮನ ಸೆಳೆಯುವುದೇ "ಬಿ.ಡಿ. ಗಣಪತಿ ಚರಿತ್ರೆ". ೧೩ ಪ್ಯಾರಾಗ್ರಾಫ್, ೫೪ ಸಾಲುಗಳಲ್ಲಿ ಗಣಪತಿಯವರ ಜೀವನ ಚರಿತ್ರೆಯನ್ನು ಕವನ ರೂಪದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಂತೆ ತೋರುವ ಬಿ.ಡಿ.ಜಿ. ಚರಿತ್ರೆ ಅದ್ಭುತವಾಗಿದೆ. ಇದನ್ನು ಓದಿದ ಕಾವ್ಯಲೋಕದ ಜ್ಞಾನಿಗಳಿಗೆ ಮೊಟ್ಟ ಮೊದಲು ನೆನಪಾಗುವುದೇ ಮೈಸೂರು ಭಾಗದಲ್ಲಿ ಇಂದಿಗೂ ಹಾಡುತ್ತಿರುವ "ಟಿಪ್ಪುವಿನ ಲಾವಣಿ" ಪದಗಳು.
    ಬಿ.ಡಿ.ಜಿ. ಬಗ್ಗೆ ಇವರ ಬರಹ ಒಂದು ಜೀವನ ಚರಿತ್ರೆ ಪುಸ್ತಕದಷ್ಟೇ ವಿಸ್ತಾರತೆಯನ್ನು ಕೆಲವೇ ಸಾಲುಗಳಲ್ಲಿ ತಿಳಿಸಿದ ಪ್ರತಿಭೆಗೆ ಯಾರೇ ತಲೆದೂಗದೇ ಇರಲಾರರು. "ಅಕಾಡಮಿ" ಇಂತಹವರಿಗೆ ಉತ್ತೇಜನ ನೀಡಿದರೆ ಬಿಡಿಜಿಯವರ "ಬದುಕು ಬವಣೆ"ಯ ಅತ್ಯುತ್ತಮ ಪುಸ್ತಕವೊಂದು ಬೆಳಕಿಗೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಲವು ಆಯಾಮಗಳಲ್ಲಿ ಚಿತ್ರಣಗೊಂಡಿರುವ "ಚೀತೆರ ಕಾಳ ಮುತ್ತ್ ಮಾಲೆ' ಗದ್ಯಪದ್ಯದಂತೆಯೂ ಭಾಸವಾಗುತ್ತದೆ. ಕೆಲವಾರು ಸಂದರ್ಭಗಳಲ್ಲಿ ಜತೆಯಾಗಿ 'ಕೊಡವ ಶಬ್ದಕೋಶ'ವನ್ನು ಓದುಗನ ಮನಸ್ಸು ಬಯಸುತ್ತದೆ. ಇವುಗಳಿಗೆ ಕಾರಣಗಳಾಗಿಯೂ ಅಳಿದು ಹೋಗುತ್ತಿರುವ ಕೊಡವ ಭಾಷೆಯ ಶಬ್ದಗಳನ್ನು ಅಕ್ಷರಗಳಲ್ಲಾದರೂ ಜೋಪಾನಿಸಲೇ ಬೇಕು ಎನ್ನುವ ಇರಾದೆ ಇರಬಹುದು. ಪ್ರಾಸಗಳ ಹಠಕ್ಕೆ ಜೋತು ಬಿದ್ದಾಗ ಸರಳತೆಗೆ ಸಂಕಷ್ಟವಾಗುವುದು.... ಹೀಗೆ 'ಚೀತೆರ ಕಾಳ ಮುತ್ತ್ ಮಾಲೆ' ಗದ್ಯವಾಗಿಯೂ, ಗದ್ಯಪದ್ಯವಾಗಿಯೂ ಲಾವಣಿಯಲ್ಲದ ಲಾವಣಿಯಾಗಿಯೂ ಓದುಗರನ್ನು ಒಂದು ವಿಭಿನ್ನವಾದ ಕಾವ್ಯಲೋಕದಲ್ಲಿ ಸುತ್ತಾಡಿಸಿ ಬಿಡುವುದರಲ್ಲಿ ಸಂಶಯವೇ ಇಲ್ಲ.

ಅಲ್ಲಾರಂಡ ವಿಠಲ ನಂಜಪ್ಪ ಮೊಬೈಲ್: ೯೪೪೮೩೧೨೩೧೦