ಕನ್ನಡ ರಾಜ್ಯೋತ್ಸವದ ಸಂಭ್ರಮ!
ಕನ್ನಡ ರಾಜ್ಯೋತ್ಸವದ ಸಂಭ್ರಮ!
ಎಳೆಯರ ಎದೆ ಬಾನಿನೊಳು ಮಕ್ಕಳ ಸಾಹಿತ್ಯದ ಮಳೆಬಿಲ್ಲು
---------
ಚಿಣ್ಣರ ಎದೆಗೆ ಕನ್ನಡ!
ಎಳೆಯರಿಗಾಗಿ ಬರೆಯುತ್ತಿರುವವರಲ್ಲಿ ಸಾಹಿತ್ಯ ರಚನೆಗೆ ಸಂಬಂಧಿಸಿದ ಗ್ರಹಿಕೆ ಬದಲಾಗುತ್ತಿರುವುದು, ಮಕ್ಕಳ ಸಾಹಿತ್ಯದಲ್ಲಿನ ಇತ್ತೀಚಿನ ದಿನಗಳ ಪ್ರಮುಖ ಬದಲಾವಣೆ. ಲೇಖಕ ಬರೆಯುವುದು ತನಗಾಗಿ, ತನ್ನ ತೃಪ್ತಿಗಾಗಿ ಎನ್ನುವ ಗ್ರಹಿಕೆ ಈ ಮೊದಲಿತ್ತು. ಈಗ, ಬರವಣಿಗೆಯ ಕೇಂದ್ರದಲ್ಲಿ ಮಕ್ಕಳನ್ನು ತಲಪುವ ಉದ್ದೇಶವಿದೆ
-ಆನಂದ ಪಾಟೀಲ,
ಹಿರಿಯ ಸಾಹಿತಿ
--------
ಕನ್ನಡದ ನಾಳೆಗಳ ಬಗ್ಗೆ ಕಾಳಜಿಯುಳ್ಳವರು ಬಿಡುಗಣ್ಣಾಗಿರಬೇಕಾದುದು ಎಳೆಯ ಮನಸ್ಸುಗಳ ಬಗ್ಗೆ. ಎಳೆಯರಿಲ್ಲದೆ ನಾಳೆಗಳೂ ಇಲ್ಲ, ಕನ್ನಡವೂ ಇಲ್ಲ. ಹಾಗಾಗಿ, ಕನ್ನಡದ ನಾಳೆಗಳೆಂದರೆ ಮಕ್ಕಳ ಇಂದುಗಳು. ಈ ಇಂದುಗಳನ್ನು ಕನ್ನಡಮಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತಹದ್ದು ಮಕ್ಕಳ ಸಾಹಿತ್ಯ.
ಕನ್ನಡಕ್ಕೆ ಸಂಬಂಧಿಸಿದಂತೆ ಸಿನಿಮಾ, ರಂಗಭೂಮಿ, ವಿಜ್ಞಾನ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಏನಾಗುತ್ತಿದೆ ಎನ್ನುವ ಕುತೂಹಲದ ಅವಲೋಕನಗಳು ಆಗಾಗ ನಡೆಯುತ್ತಿರುತ್ತವೆ. ಸಾಹಿತ್ಯದಲ್ಲಿನ ಹೊಸತನದ ಹುಡುಕಾಟವೂ ವಿರಳವೇನಲ್ಲ. ಆದರೆ, ಮಕ್ಕಳ ಸಾಹಿತ್ಯದಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಚರ್ಚೆಗಳು ಅಪರೂಪ. ಕನ್ನಡ ಸಾಹಿತ್ಯದಲ್ಲಿ ‘ಮಕ್ಕಳ ಸಾಹಿತ್ಯ’ ಅಪೌಷ್ಟಿಕ ಶಿಶು; ಬೀದಿಯಲ್ಲಾಡುವ ಮಗು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಮಕ್ಕಳ ಸಾಹಿತ್ಯ ಹೊಸ ಟಿಸಿಲೊಂದನ್ನು ಕಂಡಿದೆ; ಅದರ ಫಲವಾಗಿಯೇ, ಚಿಣ್ಣರ ಮನಸ್ಸನ್ನು ಥಟ್ಟನೆ ಸೆಳೆಯುವಂಥ ಪುಸ್ತಕಗಳು ರೂಪುಗೊಳ್ಳುತ್ತಿವೆ.
ಪುಸ್ತಕವೊಂದು ಎಳೆಯರ ಗಮನಸೆಳೆಯುವ ನಿಟ್ಟಿನಲ್ಲಿ ವಿಷಯದ ಜೊತೆಗೆ ವಿನ್ಯಾಸದ ಪಾತ್ರವೂ ಮುಖ್ಯ. ಇಂಗ್ಲಿಷ್ನಲ್ಲಿ ನೋಡಿ: ನುಣ್ಣನೆ ಕಾಗದದಲ್ಲಿ ಮುದ್ರಣಗೊಳ್ಳುವ ಮಕ್ಕಳ ಕಥೆ–ಪದ್ಯ ಪುಸ್ತಕಗಳಲ್ಲಿ ಬಣ್ಣದ ಚಿತ್ರಗಳಿರುತ್ತವೆ. ವಿವಿಧ ಆಕಾರಗಳಲ್ಲಿ, ಸ್ವರೂಪದಲ್ಲಿ ಪುಸ್ತಕಗಳು ರೂಪುಗೊಳ್ಳುತ್ತವೆ. ಅಕ್ಷರಗಳು ಗೌಣವಾಗಿ, ಬಿಂಬಗಳ ಮೂಲಕವೇ ಮಕ್ಕಳ ಮನಸ್ಸಿಗೆ ವಿಷಯವನ್ನು ಮುಟ್ಟಿಸುವ ಪ್ರಯತ್ನಗಳು ನಡೆಯುತ್ತವೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸಹಜ ಎನ್ನುವಂತಹದ್ದು ಕನ್ನಡ ಮಕ್ಕಳಿಗೆ ಐಷಾರಾಮಿ ಎನ್ನುವ ಅಭಿಪ್ರಾಯ ಕಳೆದ ಮೂರ್ನಾಲ್ಕು ವರ್ಷಗಳ ಹಿಂದಿನವರೆಗೂ ಇತ್ತು.
ಬಹುವರ್ಣದ ಮುದ್ರಣ ಕನ್ನಡದಲ್ಲಿ ಗಿಟ್ಟುವುದಿಲ್ಲ ಎನ್ನುವ ಕಾರಣಕ್ಕೆ ಕಪ್ಪುಬಿಳುಪಿನ ಉತ್ಪನ್ನವೇ ಗತಿ ಎನ್ನುವ ಸ್ಥಿತಿಯಿತ್ತು. ಅಕ್ಷರಗಳ ಗಾತ್ರ ಸ್ವಲ್ಪ ದೊಡ್ಡದಾಗಿರುವುದು ಬಿಟ್ಟರೆ, ಮಕ್ಕಳ ಪುಸ್ತಕಗಳಿಗೂ ಉಳಿದ ಪುಸ್ತಕಗಳಿಗೂ ವ್ಯತ್ಯಾಸವಿಲ್ಲದಂತೆ ಕನ್ನಡ ಪುಸ್ತಕೋ ದ್ಯಮವಿತ್ತು. ಈಗ, ಹೊಳೆಯಲ್ಲಿ ನೀರು ಸಾಕಷ್ಟು ಹರಿದಿದೆ; ಎಳೆಯರ ಪುಸ್ತಕದ ಪುಟಗಳು ನವಿಲುಗರಿಗಳಂತಾಗಿವೆ.
ಏನೆಲ್ಲಾ ಆಗಿದೆ ನೋಡಿ:
ಈ ಕಾಲದ ಮಕ್ಕಳಿಗೆ ಏನೆಲ್ಲ ಬೇಕು ಎನ್ನುವುದರ ಬಗ್ಗೆ ಪ್ರಕಾಶಕರು ಯೋಚಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಸಮಕಾಲೀನ ಸಂಗತಿಗಳನ್ನು ತರುವುದು ಹೇಗೆ ಎನ್ನುವ ಚಿಂತನೆ ಶುರುವಾಗಿದೆ. ಈ ಚಿಂತನೆಗಳು ಪ್ರಯತ್ನವಾಗಿಯೂ ಪ್ರಯೋಗವಾಗಿಯೂ ಪುಸ್ತಕಗಳ ರೂಪದಲ್ಲಿ ಮೈದಳೆಯುತ್ತಿವೆ. ಈ ನಿಟ್ಟಿನಲ್ಲಿ ತಕ್ಷಣ ನೆನಪಿಸಿ ಕೊಳ್ಳಬಹುದಾದುದು: ‘ಬಹುರೂಪಿ’, ‘ನವಕರ್ನಾಟಕ’ ಹಾಗೂ ‘ಅಭಿನವ’ ಪ್ರಕಾಶನ ಸಂಸ್ಥೆಗಳ ಪುಸ್ತಕಗಳನ್ನು.
‘ಬಹುರೂಪಿ’ ಪ್ರಕಾಶನದ ಇತ್ತೀಚಿನ ಸುಮಾರು ಮೂವತ್ತು ಪುಸ್ತಕಗಳು ಚಿಣ್ಣರ ಭಾವಜಗತ್ತನ್ನು ಮುದಗೊಳಿಸುವಂತಿವೆ. ಆಕಾರ ಹಾಗೂ ಆಶಯ, ಎರಡು ಕಾರಣಗಳಿಂದಲೂ ಗಮನಸೆಳೆಯುವಂತಿರುವ ಈ ಪುಸ್ತಕಗಳು, ಹೊಳಪು ಕಾಗದ ಹಾಗೂ ಬಣ್ಣದ ಚಿತ್ರಗಳ ಮೂಲಕ ನಳನಳಿಸುತ್ತಿರುವ ಹೂಗಳಂತಿವೆ. ಮಕ್ಕಳ ಪುಸ್ತಕಗಳ ಪ್ರಕಟಣೆಯಲ್ಲಿ ಸದಾ ಮುಂದಿರುವ ‘ನವಕರ್ನಾಟಕ’ ಪ್ರಕಾಶನದ ಪುಸ್ತಕಗಳು ಕೂಡ ಆಧುನಿಕತೆಗೆ ತೆರೆದುಕೊಂಡಿವೆ, ಹೊಸಗಾಲದ ಮಕ್ಕಳ ನಿರೀಕ್ಷೆಗಳಿಗೆ ಸ್ಪಂದಿಸುವಂತಿವೆ. ಈ ಎರಡೂ ಸಂಸ್ಥೆಗಳ ಕೆಲವು ಪ್ರಕಟಣೆಗಳಿಗೆ ‘ಟಾಟಾ ಟ್ರಸ್ಟ್’ನ ಭಾಗವಾದ ‘ಪರಾಗ್’ ಸಂಸ್ಥೆಯ ಸಹಯೋಗ ದೊರೆತಿದೆ. ದೇಶದಲ್ಲಿ ಮಕ್ಕಳ ಸಾಹಿತ್ಯವನ್ನು ಮುನ್ನೆಲೆಗೆ ತರುತ್ತಿರುವ ಪ್ರಯೋಗಗಳಿಗೆ ಬೆಂಬಲವಾಗಿ ನಿಂತಿರುವ ‘ಪರಾಗ್’, ಕನ್ನಡದಲ್ಲೂ ಮಕ್ಕಳ ಸಾಹಿತ್ಯದ ಭಿನ್ನ ಪ್ರಯತ್ನಗಳ ಕೈಕುಲುಕುತ್ತಿದೆ.
ಮಕ್ಕಳ ಸಾಹಿತ್ಯದಲ್ಲಿ ‘ಅಭಿನವ’ ಪ್ರಕಾಶನದ್ದು ಮಹತ್ವದ ಹೆಜ್ಜೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರಗಳು ಕನ್ನಡದಲ್ಲಿ ಹೆಚ್ಚು ದೊರಕಿರುವುದು ‘ಅಭಿನವ’ದ ಪ್ರಕಟಣೆಗಳಿಗೆ. ಕೆ.ವಿ.ತಿರುಮಲೇಶರ ಮಕ್ಕಳ ಪದ್ಯಗಳ ಹತ್ತು ಕೃತಿಗಳನ್ನು ಒಮ್ಮೆಗೇ ಇಡುಗಂಟಿನಂತೆ ಪ್ರಕಟಿಸಿದ್ದು ‘ಅಭಿನವ’ದ ಹೆಗ್ಗಳಿಕೆ. ಈ ಬಳಗ, ಇತ್ತೀಚೆಗೆ ‘ಜಿಬಿ ಹೊಂಬಳ ಪುಸ್ತಕಮಾಲಿಕೆ’ಯಲ್ಲಿ ಮಕ್ಕಳಿಗಾಗಿ ಏಳು ಚಿತ್ರ–ಕಥನ ಪುಸ್ತಕಗಳನ್ನು ಪ್ರಕಟಿಸಿದೆ; ಹೊಸ ಹಾದಿಗೆ ಹೊರಳಿಕೊಂಡಿದೆ.
ಪುಟಾಣಿಗಳ ಸುಂದರ ಪುಸ್ತಕಗಳಿಗೆ ಹೆಸರಾದ ಮತ್ತೊಂದು ಪ್ರಕಾಶನ ‘ಹರಿವು ಬುಕ್ಸ್’. ಹರಿವಿನ ಪ್ರಕಟಣೆಗಳಾದ ‘ಚಿಕ್ಕು ಬುಕ್ಕು’, ‘ಪುಟಾಣಿ ಪಂಟರ್ಸ್’, ‘ಜಿಪ್ಸಿ ಜೀತು’ ಸೇರಿದಂತೆ ಬಹುತೇಕ ಪುಸ್ತಕಗಳು ಆಕರ್ಷಕ ಚಿತ್ರಗಳು ಹಾಗೂ ಗುಣಮಟ್ಟದ ನುಣುಪು ಕಾಗದದಲ್ಲಿ ರೂಪುಗೊಂಡಿವೆ. ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ಸಂಪಾದಕತ್ವದಲ್ಲಿ ‘ವಸಂತ ಪ್ರಕಾಶನ’ ಪ್ರಕಟಿಸಿದ ‘ವಸಂತ ಬಾಲಸಾಹಿತ್ಯ ಮಾಲೆ’ಯ ಹನ್ನೆರಡು ಪುಸ್ತಕಗಳು, ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಸೇರ್ಪಡೆಯಾಗಿರುವ ಉತ್ತಮ ಕೃತಿಗಳಾಗಿವೆ.
ಕನ್ನಡದ ಪ್ರಕಾಶಕರ ಜೊತೆಗೆ, ದೇಶದ ವಿವಿಧ ಭಾಷೆಗಳಲ್ಲಿ ಮಕ್ಕಳ ಸಾಹಿತ್ಯದ ದಿಕ್ಕುದೆಸೆ ಬದಲಿಸುವ ಪ್ರಯತ್ನದಲ್ಲಿ ತೊಡಗಿರುವ ‘ಪ್ರಥಮ್’ ಸಂಸ್ಥೆ ಕನ್ನಡದಲ್ಲೂ ಹಲವು ಪುಸ್ತಕಗಳನ್ನು ಪ್ರಕಟಿಸುತ್ತಿದೆ. ‘ಪ್ರಥಮ್’ ಪ್ರಕಟಣೆಗಳಿಗೆ ಮುದ್ರಣದ ಗುಣಮಟ್ಟದಲ್ಲಿ ಸದಾ ಪ್ರಥಮದರ್ಜೆ.
ಏಕವ್ಯಕ್ತಿ ಸಾಹಸದ ರೂಪದಲ್ಲೂ ಕೆಲವರು ಉತ್ತಮ ಪುಸ್ತಕಗಳನ್ನು ಪ್ರಕಟಿಸಿರುವುದಿದೆ. ಅವರಲ್ಲಿ ಮುಖ್ಯರಾದವರು, ಬೆಳಗಾವಿ ಮೂಲದ ಅನುಪಮಾ ಬೆಣಚಿನಮರ್ಡಿ. ‘ಅವ್ವ ಪುಸ್ತಕ’ದ ಮೂಲಕ ಅವರು ಪ್ರಕಟಿಸಿರುವ ‘ಪತ್ತೇದಾರ ಪ್ರಣವ’, ‘ಕೊಂಚಿಗೆಯ ಸಾಹಸ’, ‘ಇರುವೆಗಳು ಮತ್ತು ಆಗಂತುಕ’, ‘ಕೆಂಪಿ’ ಮುಂತಾದ ಪುಸ್ತಕಗಳು ಎಳೆಯರಲ್ಲಿ ಪುಸ್ತಕಪ್ರೀತಿಯನ್ನು ಮೂಡಿಸುವಂತಿವೆ. ಮುಖ್ಯವಾಗಿ, ‘ಕನ್ನಡ ವರ್ಣಮಾಲೆ’ ಕೃತಿ, ಬಿಂಬದ ಜೊತೆಗೆ ಅಕ್ಷರವನ್ನು ಪರಿಚಯಿಸುವ, ಇಂಗ್ಲಿಷ್ ಅಕ್ಷರಗಳ ಮೂಲಕ ಉಚ್ಚಾರಣೆ ತಿಳಿಸುವ ವಿಶಿಷ್ಟ ಪ್ರಯತ್ನ; ಕನ್ನಡದಲ್ಲಿ ಇಂಥ ಪ್ರಯತ್ನಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಶಿವಲಿಂಗಪ್ಪ ಹಂದಿಹಾಳ್ ಅವರ ‘ನೋಟ್ಬುಕ್’ (ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕೃತ) ಭಿನ್ನಸಾಧ್ಯತೆಗಳ ಮೂಲಕ ಮಕ್ಕಳನ್ನು ಸೆಳೆಯಲು ಪ್ರಯತ್ನಿಸಿರುವ ಮಕ್ಕಳ ಕಥೆಗಳ ಸಂಕಲನ. ಉತ್ತಮ ಮುದ್ರಣದ ಜೊತೆಗೆ, ಕ್ಯುಆರ್ ಕೋಡ್ಗಳ ಮೂಲಕ ಕಥೆಗಳನ್ನು ಕೇಳುವ ಅವಕಾಶ ಪುಸ್ತಕದಲ್ಲಿದೆ. ಇಂಥ ‘ಕೇಳು ಪುಸ್ತಕ’ಗಳು ಮಕ್ಕಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಾಗಿದೆ.
ಗುಣಮಟ್ಟದ ಪ್ರಕಟಣೆಗಳಷ್ಟೇ ಅಲ್ಲ, ಮಕ್ಕಳ ಸಾಹಿತ್ಯದ ಸ್ವರೂಪದ ಬಗೆಗಿನ ಚಿಂತನೆಗಳೂ ಕನ್ನಡದಲ್ಲಿ ನಡೆಯುತ್ತಿವೆ. ಎಳೆಯರಿಗಾಗಿ ಬರೆಯುವವರಿಗೆ ಹಾಗೂ ಮಕ್ಕಳ ಸಾಹಿತ್ಯದ ಕುತೂಹಲಿಗಳಿಗಾಗಿ ‘ಬಹುರೂಪಿ’ ಕಮ್ಮಟಗಳನ್ನು ನಡೆಸಿದೆ. ‘ಪರಾಗ್’ ಸಂಸ್ಥೆಯ ಸಹಯೋಗದಲ್ಲೂ ಮಾತುಕತೆ ಕೂಟಗಳು ನಡೆದಿವೆ.
ಮಕ್ಕಳ ಸಾಹಿತ್ಯಕ್ಕೆ ಜೀವನವನ್ನು ತೆತ್ತುಕೊಂಡಿರುವ ಆನಂದ ಪಾಟೀಲರು ಹಿಂದೊಮ್ಮೆ ಶಾಲಾಮಕ್ಕಳಿಗಾಗಿ ಕಮ್ಮಟಗಳನ್ನು ನಡೆಸಿದ್ದರು. ಈಗಲೂ ಎಳೆಯರ ಲೋಕದಲ್ಲಿ ಅವರದು ದಣಿವರಿಯದ ವಿಹಾರ. ಅದೇ ಹಾದಿಯಲ್ಲಿ, ಸ.ರಘುನಾಥ ಮೇಷ್ಟ್ರು ಮಕ್ಕಳಿಗಾಗಿ ಇತ್ತೀಚೆಗಷ್ಟೇ ಸರಣಿ ಕಮ್ಮಟಗಳನ್ನು ನಡೆಸಿದ್ದಾರೆ. ಮಕ್ಕಳಿಗೆ ಓದುವ, ಬರೆಯುವ ಗುಟ್ಟನ್ನು ಪರಿಚಯಿಸುವುದರ ಜೊತೆಗೆ, ಕಮ್ಮಟಾರ್ಥಿಗಳ ಬಾಲಪಲುಕುಗಳನ್ನು ಪುಸ್ತಕ ಆಗಿಸುತ್ತಿದ್ದಾರೆ. ಪಾಟೀಲರು ಹಾಗೂ ರಘುನಾಥರು ತಂತಮ್ಮ ನೆಲೆಯಲ್ಲಿ ಮಕ್ಕಳ ಸೃಜನಶೀಲತೆಗೆ ಹೊಳಪು ನೀಡುವ ಕೆಲಸದಲ್ಲಿ ತೊಡಗಿಕೊಂಡಿದ್ದರೆ, ಇಂಥ ಕೆಲಸಗಳನ್ನು ಮಾಡಲೆಂದೇ ಇರುವ ಧಾರವಾಡದ ‘ಬಾಲ ವಿಕಾಸ ಅಕಾಡೆಮಿ’ ಮಂಕಾಗಿದೆ.
ಆಧುನಿಕತೆಯ ಜೊತೆಗಿನ ಓಟದಲ್ಲಿ ಸೇರಿಕೊಂಡಿರುವ ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಹೊಸ ಭಾವ–ಬಣ್ಣ ಕಾಣಿಸುತ್ತಿರುವುದು ನಿಜ. ಇದು ಸ್ವಾಗತಾರ್ಹ ಬೆಳವಣಿಗೆ. ಪ್ರಶ್ನೆ ಇರುವುದು, ಮಕ್ಕಳ ಸಾಹಿತ್ಯ ಸಂಕ್ರಮಣದ ಫಸಲು ಮಕ್ಕಳನ್ನು ಮುಟ್ಟುತ್ತಿದೆಯೇ ಎನ್ನುವುದರಲ್ಲಿ. ಕನ್ನಡದ ಮಕ್ಕಳಿಗೆ ಪಠ್ಯೇತರ ಪುಸ್ತಕ ಹಿಡಿಯುವಷ್ಟು ವ್ಯವಧಾನವನ್ನು ಪೋಷಕರು ಹಾಗೂ ಶೈಕ್ಷಣಿಕ ವ್ಯವಸ್ಥೆ ಉಳಿಸಿದೆಯೆ? ಮಕ್ಕಳ ಎದೆಗೆ ಸಾಹಿತ್ಯದ ಬಿತ್ತಗಳು ಬೀಳುತ್ತಿವೆಯೆ? ಕನ್ನಡ ಶಾಲೆಗಳೇ ಮುಳುಗುವ ಹಡಗುಗಳಾಗಿರುವಾಗ, ಮಕ್ಕಳ ಸಾಹಿತ್ಯವೆಂಬ ನಾವೆಗಳ ಭವಿಷ್ಯವೇನು?
*
----------
ಎಚ್ಚರಗೊಳ್ಳಲಿ ಗ್ರಂಥಾಲಯ ಇಲಾಖೆ
ಪುಸ್ತಕ ಸಂಸ್ಕೃತಿಯ ಬೆಳವಣಿಗೆಯಲ್ಲಿ ಗ್ರಂಥಾಲಯ ಇಲಾಖೆಯದ್ದು ಮಹತ್ವದ ಪಾತ್ರ. ಖರೀದಿ ಪ್ರಕ್ರಿಯೆಗೆ ಪರಿಗಣಿಸಲು ಬಯಸುವ ಪ್ರತಿ ಪುಸ್ತಕ ಗ್ರಂಥಾಲಯ ಇಲಾಖೆಯಲ್ಲಿ ನೋಂದಣಿ ಆಗುವುದು ಕಡ್ಡಾಯ. ನೋಂದಣಿಗೆ ಸಂಬಂಧಿಸಿದಂತೆ ಗ್ರಂಥಾಲಯ ಇಲಾಖೆ ಪುಸ್ತಕದ ಸ್ವರೂಪ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕೆಲವು ಮಾನದಂಡಗಳನ್ನು ಗೊತ್ತುಪಡಿಸಿಕೊಂಡಿದೆ. ಹೊಸಗಾಲದ ಮಕ್ಕಳ ಪುಸ್ತಕಗಳ ಸ್ವರೂಪ ತನ್ನ ಮಾನದಂಡಗಳಿಗೆ ಹೊಂದದೆ ಹೋದಾಗ, ಅವುಗಳನ್ನು ನೋಂದಣಿ ಮಾಡಿಕೊಳ್ಳಲು ಇಲಾಖೆ ನಿರಾಕರಿಸುತ್ತಿದೆ. ‘ಇಲಾಖೆ ‘ಮಕ್ಕಳ ಸಾಹಿತ್ಯ’ಕ್ಕೆ ಸಂಬಂಧಿಸಿದಂತೆ ಅಪ್ಡೇಟ್ ಆಗಬೇಕು’ ಎನ್ನುವುದು ‘ಬಹುರೂಪಿ’ ಜಿ.ಎನ್.ಮೋಹನ್ ಅವರ ಒತ್ತಾಯ. ಅಲ್ಲದೆ, ಇಲಾಖೆಯ ದರನೀತಿಯೂ ಮಕ್ಕಳ ಸಾಹಿತ್ಯಕ್ಕೆ ಉತ್ತೇಜನಕಾರಿಯಾಗಿಲ್ಲ. ಸಾಮಾನ್ಯ ಪುಸ್ತಕವೊಂದರ ಖರೀದಿಗೆ ಸಂಬಂಧಿಸಿದಂತೆ ಇಲಾಖೆ ಗೊತ್ತುಪಡಿಸಿರುವ ದರ, ಉತ್ಕೃಷ್ಟ ಗುಣಮಟ್ಟದ ಮಕ್ಕಳ ಸಾಹಿತ್ಯ ಕೃತಿಗಳಿಗೂ ಅನ್ವಯಿಸಲಾಗದು. ಮಕ್ಕಳ ಸಾಹಿತ್ಯದ ಕೃತಿಗಳ ನೋಂದಣಿ ಮತ್ತು ಖರೀದಿಗೆ ಸಂಬಂಧಿಸಿದಂತೆ ಗ್ರಂಥಾಲಯ ಇಲಾಖೆ ವಿಶೇಷ ನೀತಿಯೊಂದನ್ನು ರೂಪಿಸಿಕೊಳ್ಳುವುದು ಅನಿವಾರ್ಯ.
*
--------
ವಿದೇಶಿಯರು ಕಲೀತಾರೆ ‘ಅ ಆ ಇ ಈ’
ಮೈಸೂರಿನಲ್ಲಿ ಕನ್ನಡ ಕಲಿಯಲು ಬಂದಿದ್ದ ಪೆನ್ವಿಲ್ವೇನಿಯಾ ವಿಶ್ವವಿದ್ಯಾಲಯದ ಕಮಲಿನಿ ಹೆಗಡೆ ಮತ್ತು ಲಡ್ವಿಗ್ ಮ್ಯಾಕ್ಸಿಮಿಲಿಯನ್ ವಿಶ್ವವಿದ್ಯಾಲಯದ ಅನ್ನೆ ಕ್ಯಾಥರಿನ ಅವರೊಂದಿಗೆ ಶಿಕ್ಷಕಿ ಸಂಘಮಿತ್ರೆ
ಕೆ.ನರಸಿಂಹಮೂರ್ತಿ(ಚಿತ್ರ)
ಇದು ಕನ್ನಡಿಗರಿಗೆ ಕನ್ನಡ ಕಲಿಸುವ ಸಾಮಾನ್ಯ ಕಾಯಕವಲ್ಲ. ವಿದೇಶಿಯರಿಗೆ ಕನ್ನಡವನ್ನು ಕಲಿಸುವ ವಿಶಿಷ್ಟ ಕಾಯಕ. ಎರಡೂವರೆ ದಶಕಗಳಿಂದ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇದು ಸದ್ದಿಲ್ಲದೆ ನಡೆಯುತ್ತಿದೆ ಎಂಬುದೇ ವಿಶೇಷ.
ಇದಕ್ಕೆ ನೀರೆರೆಯುತ್ತಿರುವುದು ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್. ಈ ಸಂಸ್ಥೆಯು ಅಮೆರಿಕದ ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳಾದ ಹಿಂದಿ, ಮಲಯಾಳ, ಮರಾಠಿ, ಪಂಜಾಬಿ, ಸಂಸ್ಕೃತ, ತಮಿಳು, ಉರ್ದು, ತೆಲುಗು ಮತ್ತು ಕನ್ನಡ ಕಲಿಯಲು ಶಿಷ್ಯವೇತನ ನೀಡುತ್ತದೆ. ಅದನ್ನು ಬಳಸಿಕೊಂಡು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದು ಕನ್ನಡ ಕಲಿತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿನ ವಿದ್ವಾಂಸರೊಂದಿಗೆ ಸೇರಿ, ಪೆನ್ಸಿಲ್ವೇನಿಯಾ ವಿವಿಯ ಅಮ್ಮೆಲ್ ಶರೋನ್ ರನ್ನನ ಗದಾಯುದ್ಧವನ್ನು, ಸೌತ್ ಫ್ಲಾರಿಡಾ ವಿವಿಯ ಗಿಲ್ ಬೆನ್ ಹೀರತ್ ಅವರು ಹರಿಹರನ ರಗಳೆಗಳನ್ನು ಅನುವಾದಿಸಿದ್ದಾರೆ. ಕೆಲವರು ಕನ್ನಡದಲ್ಲೇ ಪಿಎಚ್ಡಿ ಮಾಡಿದ್ದಾರೆ.
ವಿದೇಶಿಯರಿಗೆ ಕನ್ನಡದ ಜೊತೆಗೆ, ಕರ್ನಾಟಕದ ಸಾಹಿತ್ಯ, ಜನ ಸಂಸ್ಕೃತಿ, ಸಮಾಜ, ಚರಿತ್ರೆಯ ಅರಿವನ್ನು ದಾಟಿಸುವಲ್ಲಿ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯೂ ಪರೋಕ್ಷವಾಗಿ ಭಾಗಿಯಾಗಿದೆ. ಏಕೆಂದರೆ ಇಲ್ಲಿ ಪ್ರಾಧ್ಯಾಪಕರಾಗಿದ್ದವರೇ ಕನ್ನಡವನ್ನು ಇಂಗ್ಲಿಷ್ ಮೂಲಕ ಹೇಳಿಕೊಡುವ ಸಾಹಸಮಯ ಮತ್ತು ಸೃಜನಶೀಲ ಹೊಣೆಗಾರಿಕೆಗೆ ಹೆಗಲು ಕೊಟ್ಟಿದ್ದಾರೆ. ವಿದೇಶಿಯರಿಗೆ ಕನ್ನಡ ಕಲಿಸುವ ಸಲುವಾಗಿಯೇ ದ್ವಿಭಾಷಿಕ ಸಂವಹನ–ಬೋಧನಾ ಸಾಮರ್ಥ್ಯವನ್ನು ಗಳಿಸಿಕೊಳ್ಳಲು ಇವರೆಲ್ಲ ಪಟ್ಟ ಪರಿಶ್ರಮ, ಮಾಡಿದ ಪ್ರಯೋಗಗಳಿಗೆ ಲೆಕ್ಕವಿಲ್ಲ.
ಈ ಯೋಜನೆಯಡಿ ತೆರೆಯಲಾಗಿದ್ದ ಕಲಿಕಾ ಕೇಂದ್ರದ ಮೊದಲ ಬೋಧಕ ಪ್ರೊ.ಆರ್.ವಿ.ಎಸ್.ಸುಂದರಂ. ಅವರೊಂದಿಗೆ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಎಚ್.ಎಸ್.ಹರಿಶಂಕರ್, ಪ್ರೊ.ಎನ್.ಎಸ್.ತಾರಾನಾಥ್, ಪ್ರೊ.ಲಕ್ಷ್ಮಿನಾರಾಯಣ ಅರೋರ, ಪ್ರೊ.ಅಕ್ಕಮಹಾದೇವಿ ಇದ್ದಾರೆ. ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರೊ.ಜ್ಯೋತಿ ಶಂಕರ್, ಮಹಾರಾಜ ಕಾಲೇಜಿನ ಪ್ರೊ.ಆಶಾಕುಮಾರಿ ಈ ಸಾಲಿನಲ್ಲಿದ್ದಾರೆ. ಅಧ್ಯಯನ ಸಂಸ್ಥೆಯಲ್ಲಿ ಪ್ರಸ್ತುತ ಭಾಷಾಂತರಕಾರರಾಗಿರುವ ಸಿ.ಎಸ್.ಪೂರ್ಣಿಮ ಈ ಪರಂಪರೆಯನ್ನು ಮುಂದುವರಿಸಿದ್ದಾರೆ.
‘ಕನ್ನಡ ಮಾತನಾಡುವುದನ್ನು ಹೇಳಿಕೊಟ್ಟರೆ ಸಾಕು ಎನ್ನುತ್ತದೆ ಇನ್ಸ್ಟಿಟ್ಯೂಟ್. ಆಗ, ಬರಹದ ಭಾಷೆ ಮತ್ತು ಮಾತನಾಡುವ ಭಾಷೆಯನ್ನು ಹೇಳಿಕೊಟ್ಟರೆ ಸಾಕು. ಆದರೆ ಕೆಲವು ಯುವಕ–ಯುವತಿಯರು ಕ್ಲಾಸಿಕಲ್ ಕನ್ನಡವನ್ನು ಹೇಳಿಕೊಡಿ ಎನ್ನುತ್ತಾರೆ. ಅವರಿಗೆ ಹಳೆಗನ್ನಡವನ್ನೂ ಹೇಳಿಕೊಡಬೇಕಾಗುತ್ತದೆ. ಹರಿಹರನ ರಗಳೆಗಳ ಬಗ್ಗೆ ಅಧ್ಯಯನ ಮಾಡಿರುವ ಗಿಲ್ ಅವರು ನಡುಗನ್ನಡವನ್ನೂ ಶ್ರದ್ಧೆಯಿಂದ ಕಲಿತರು’ ಎಂದು ಪ್ರೊ.ಸುಂದರಂ ಸ್ಮರಿಸಿದರು.
ಅಧ್ಯಯನ ಸಂಸ್ಥೆಗೂ ಅಮೆರಿಕದ ಸಂಸ್ಥೆಗೂ ನೇರ ಸಂಬಂಧವಿಲ್ಲ. ಆದರೆ ಅಮೆರಿಕದ ಸಂಸ್ಥೆ ಈ ವಿದ್ವಾಂಸರ ಸೇವೆಯನ್ನು ಬಳಸಿಕೊಳ್ಳುತ್ತದೆ. ನವದೆಹಲಿಯ ಜೆಎನ್ಯುನ ಕನ್ನಡ ವಿಭಾಗದಲ್ಲಿದ್ದಾಗ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಇನ್ಸ್ಟಿಟ್ಯೂಟ್ ಅನ್ನು ಮುನ್ನಡೆಸಿದ್ದರು.
೯೦ರ ದಶಕದಲ್ಲಿ ಸೇರಿಕೊಂಡ ಕನ್ನಡ:
‘ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ನಲ್ಲಿ ಒಂದು ವರ್ಷ ಹಾಗೂ ಮೂರು ತಿಂಗಳ ಕಲಿಕಾ ಕಾರ್ಯಕ್ರಮಗಳಿದ್ದು, ೯೦ರ ದಶಕದಲ್ಲಿ ದಶಕದಲ್ಲಿ ಹಿಂದಿ, ಉರ್ದು, ಬಂಗಾಳ, ತಮಿಳು, ಸಂಸ್ಕೃತ ಜೊತೆಗೆ ಕನ್ನಡವೂ ಸೇರಿಕೊಂಡಿತು. ದಕ್ಷಿಣ ಭಾರತ ಎಂದರೆ ತಮಿಳು ಎಂದು ಮಾತ್ರ ತಿಳಿದಿದ್ದ ವಿದೇಶಿಯರಿಗೆ ಕನ್ನಡದ ಮೇಲೆ ಆಸಕ್ತಿ ಹುಟ್ಟಲು ಇದು ಕಾರಣವಾಯಿತು’ ಎಂಬುದು ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ಪ್ರತಿಪಾದನೆ.
*
-------
ಮಕರಂದ:
ಕನ್ನಡ ಕಲಿಸುವ ಸಂಕಲ್ಪ
ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎನ್ನುವ ತುಡಿತದಿಂದ ಹುಟ್ಟಿಕೊಂಡ ಸಂಸ್ಥೆ ಅದು. ಹೆಸರು ಮಕರಂದ. ಹೊರ ರಾಜ್ಯದವರಿಗೆ ಕನ್ನಡ ಕಲಿಸುವ ಸಂಕಲ್ಪ ಹೊಂದಿರುವ ಈ ಸಂಸ್ಥೆ ಹುಟ್ಟಿಕೊಂಡದ್ದು, ಬೆಂಗಳೂರು ಉತ್ತರದಲ್ಲಿರುವ ಭಾರತೀಯ ಸಿಟಿಯ ‘ನಿಕು ಹೋಮ್ಸ್’ ಎನ್ನುವ ವಸತಿಸಮುಚ್ಚಯದಲ್ಲಿ ೨೦೦ ಮಂದಿಗೆ ಕನ್ನಡ ಕಲಿಸುವುದರ ಮೂಲಕ.
ಈಗ ೧೦೦ ಮಂದಿ ಸ್ವಯಂಸೇವಕರು ಕನ್ನಡ ಕಲಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಬೇರೆ ಬೇರೆ ವೃತ್ತಿಗಳಲ್ಲಿರುವವರು ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಪಾಠ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ೧೮ ವರ್ಷದಿಂದ ೭೦ ವಯಸ್ಸಿನವರೆಗಿನ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳೂ ಇದೇ ವಯಸ್ಸಿವರಿದ್ದಾರೆ.
ಮೊದಲು ಎರಡು ಆವೃತ್ತಿಗಳಲ್ಲಿ ಮುಖಾಮುಖಿ ತರಗತಿಗಳನ್ನು ನಡೆಸಲಾಯಿತು. ಆದರೆ, ಸಮಯ ಹೊಂದಾಣಿಕೆಯೂ ಸೇರಿದಂತೆ ಕೆಲವು ಸಮಸ್ಯೆಗಳು ಉದ್ಭವಿಸಿದವು. ಈಗ ಕನ್ನಡ ತರಗತಿಗಳನ್ನು ಆನ್ಲೈನ್ನಲ್ಲಿ ಮಾತ್ರ ನಡೆಸಲಾಗುತ್ತಿದೆ. ಕರ್ನಾಟಕ, ಭಾರತ ಹಾಗೂ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿರುವವರು ಆನ್ಲೈನ್ ಮೂಲಕ ಅನ್ಯಭಾಷಿಕರಿಗೆ ಕನ್ನಡ ಕಲಿಸುತ್ತಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕಜಕಿಸ್ತಾನ, ಅಮೆರಿಕದಿಂದ ಪಾಠ ಮಾಡುವವರಿದ್ದಾರೆ. ತರಗತಿ ಒಂದು ಗಂಟೆಯದ್ದಾಗಿರುತ್ತದೆ; ಪರೀಕ್ಷೆಗಳೂ ಇರುತ್ತವೆ. ಘಟಿಕೋತ್ಸವ ಕಾರ್ಯಕ್ರಮ ಮಾಡಿ ‘ನನಗೆ ಕನ್ನಡ ಗೊತ್ತು’ ಎಂದು ಸಾರುವ ಕನ್ನಡ ಕಲಿಕೆಯ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ.
ಪ್ರಸ್ತುತ ೨,೦೦೦ ಮಂದಿ ಕನ್ನಡ ಕಲಿಯುತ್ತಿ ದ್ದಾರೆ. ಇದುವರೆಗೆ ೬,೦೦೦ ಮಂದಿ ಕನ್ನಡ ಕಲಿತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತ್ನಿಂದ ಬಂಗಾಳದವರೆಗೆ ಎಲ್ಲ ರಾಜ್ಯಗಳಿಂದ ಬಂದವರೂ ಕನ್ನಡ ಕಲಿಯುತ್ತಿದ್ದಾರೆ.
*
---------
ನಾಡನುಡಿಯ ಕಲಿಕಾ ಕೇಂದ್ರಗಳು
‘ಹೊರರಾಜ್ಯದವರಿಗೆ ತನ್ನ ರಾಜ್ಯದ ಮಾತೃಭಾಷೆಯನ್ನು ಕಲಿಸುವುದಕ್ಕೆ ಯಾವ ರಾಜ್ಯ ಸರ್ಕಾರವೂ ಪ್ರಯತ್ನಿಸಿದ ಉದಾಹರಣೆ ಇಲ್ಲ. ಆದರೆ ಕರ್ನಾಟಕ ಸರ್ಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅದನ್ನು ಮಾಡುತ್ತಿದೆ. ದೇಶದ ಇತರ ರಾಜ್ಯಗಳಿಂದ ಬಂದು ಇಲ್ಲಿ ನೆಲಸಿರುವವರಿಗೆ ಕನ್ನಡ ಕಲಿಕಾ ಕೇಂದ್ರಗಳ ಮೂಲಕ ಕನ್ನಡ ಕಲಿಸಲಾಗುತ್ತಿದೆ. ಸಾವಿರಾರು ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದೊಂದು ಶ್ಲಾಘನೀಯ ಪ್ರಯತ್ನ’
–ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅನ್ಯಭಾಷಿಕರಿಗೆ ಕನ್ನಡ ಕಲಿಸುತ್ತಿರುವ ಸುಷ್ಮಾ ಅವರ ಮಾತಿದು.
ಮೂಲತಃ ಕೇರಳದವರಾದ ಅವರು ವರ್ತೂರು ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ೧೦೦ ಜನರಿಗೆ ಅವರು ಕನ್ನಡದಲ್ಲಿ ಅ, ಆ, ಇ, ಈ... ಹೇಳಿಕೊಡುತ್ತಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಮೈಸೂರಿನಲ್ಲಿ ಒಂದು ಮತ್ತು ಬೆಂಗಳೂರಿನಲ್ಲಿ ೩೪ ಕನ್ನಡ ಕಲಿಕಾ ಕೇಂದ್ರಗಳು ನಡೆಯುತ್ತಿವೆ. ಸುಷ್ಮಾ ಅವರು ಶಿಕ್ಷಕಿಯಾಗಿರುವ ಕೇಂದ್ರವು ಅವುಗಳಲ್ಲೊಂದು.
‘ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆ’ ಎಂಬುದು ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ರಾಜ್ಯದಲ್ಲಿರು ವಿವಿಧ ಕೇಂದ್ರ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ವಸತಿ ಸಮುಚ್ಚಯಗಳು... ಹೀಗೆ ಬೇರೆ ಬೇರೆ ಕಡೆಗಳಲ್ಲಿರುವ ಅನ್ಯಭಾಷಿಕರಿಗೆ ರಾಜ್ಯದ ಜನರೊಂದಿಗೆ ಮಾತನಾಡಲು ಬೇಕಾದಷ್ಟು ಕನ್ನಡ ಕಲಿಸಲು ರೂಪಿಸಲಾಗಿರುವ ಕಾರ್ಯಕ್ರಮ ಇದು. ಮೂರು ತಿಂಗಳಲ್ಲಿ ೩೬ ತರಗತಿಗಳನ್ನು (ವಾರಕ್ಕೆ ಮೂರು, ತಿಂಗಳಿಗೆ ೧೨) ಮಾಡಲಾಗುತ್ತದೆ. ಕನ್ನಡ ಕಲಿಯಲು ಆಸಕ್ತಿ ಇರುವವವರು ಯಾವುದಾದರೂ ಸಂಸ್ಥೆಯ ಮೂಲಕ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರೆ ಸಾಕು. ಪ್ರಾಧಿಕಾರವು ಅಂತಹ ಸಂಘಕ್ಕೆ ತರಬೇತುದಾರರನ್ನು ಕಳುಹಿಸಿ ಆಸಕ್ತರಿಗೆ ಕನಿಷ್ಠ ಮಾತನಾಡಲು ಸಾಧ್ಯವಾಗುವಷ್ಟು ಕನ್ನಡ ಕಲಿಸುತ್ತಾರೆ. ಪಾಠ ಮಾಡಿದವರಿಗೆ ಪ್ರಾಧಿಕಾರ ಗೌರವಧನವನ್ನು ನೀಡುತ್ತದೆ. ಇದೇ ಉದ್ದೇಶಕ್ಕಾಗಿ ಪ್ರಾಧಿಕಾರವು ಪಠ್ಯಕ್ರಮವನ್ನೂ ರೂಪಿಸಿದೆ. ತರಬೇತುದಾರರನ್ನು ನಿಯೋಜಿಸಲು ಸಾಧ್ಯವಾಗದ ಕಡೆಗಳಲ್ಲಿ ಪ್ರಾಧಿಕಾರವು ಈ ಪಠ್ಯಕ್ರಮ ನೀಡಿ, ಕನ್ನಡ ಕಲಿಸುವುದಕ್ಕೆ ಪ್ರೇರೇಪಿಸುತ್ತದೆ.
ಬೆಂಗಳೂರಿನ ಎಚ್ಎಎಲ್ನಲ್ಲಿ ಮೂರು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದೇ ರೀತಿ ನಿಮ್ಹಾನ್ಸ್, ಆರ್ಬಿಐ ಸೇರಿದಂತೆ ವಿವಿಧ ಕಡೆಗಳಲ್ಲಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಮೈಸೂರಿನ ರೈಲ್ವೆ ಇಲಾಖೆಯಲ್ಲಿ ಒಂದು ಕೇಂದ್ರವಿದ್ದು, ೧೩೦ ಮಂದಿ ಕನ್ನಡ ಕಲಿಯುತ್ತಿದ್ದಾರೆ. ಅಲ್ಲಿ ಎರಡು ಬ್ಯಾಚ್ಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.
ಉತ್ತಮ ಸ್ಪಂದನೆ: ‘ನಮ್ಮ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಹೊರರಾಜ್ಯದ ೩,೦೦೦ ಜನರು ಕನ್ನಡ ಕಲಿಯುತ್ತಿದ್ದಾರೆ. ಇವರಲ್ಲಿ ಕೇರಳದವರು ೧,೫೦೦ ಮಂದಿ ಇದ್ದಾರೆ. ಹಿಂದಿ ಭಾಷಿಕರು ಅನಂತರದ ಸ್ಥಾನದಲ್ಲಿದ್ದಾರೆ. ಸದ್ಯಕ್ಕೆ ನಮ್ಮ ಕಾರ್ಯಕ್ರಮ ಬೆಂಗಳೂರಿಗಷ್ಟೇ ಸೀಮಿತವಾಗಿದೆ. ನಮಗೆ ಇರುವ ಬಜೆಟ್ನಲ್ಲಿ ಯೋಜನೆಯನ್ನು ನಿರ್ವಹಿಸುತ್ತಿದ್ದೇವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಮದ್ರಸಾಗಳಲ್ಲೂ ಕನ್ನಡ
ಕನ್ನಡ ಕಲಿಕಾ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿರುವ ಪ್ರಾಧಿಕಾರ, ಮದ್ರಸಾಗಳಲ್ಲೂ ಕನ್ನಡ ಕಲಿಸಲು ಮುಂದಾಗಿದೆ. ಈ ಉದ್ದೇಶಕ್ಕಾಗಿ ಉರ್ದುವಿನಲ್ಲಿ ಸೂಚನೆಗಳನ್ನು ನೀಡುವ ಪಠ್ಯವನ್ನು ಸಿದ್ಧಪಡಿಸಿದೆ.
‘ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಕನ್ನಡ ಕಲಿಸುವ ಮದ್ರಸಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ನವೆಂಬರ್ ಮಧ್ಯಭಾಗದಲ್ಲಿ ೧೮೦ ಮದ್ರಸಾಗಳಲ್ಲಿ ಕನ್ನಡ ಕಲಿಕೆ ಆರಂಭವಾಗಲಿದೆ. ವರ್ಷಾಂತ್ಯದಲ್ಲಿ ಇದನ್ನು ೧,೫೦೦ ಮದ್ರಸಾಗಳಿಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ’ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.
-ರಘುನಾಥ ಚ.ಹ.


